Monday, June 6, 2011

ಹನುಮಪ್ಪ ನ ತೇರು! (ಪ್ರಬಂಧ)

ಭಾಗ - (೧)

ಇನ್ನು ಆ ಕಡೆ ರಥೋತ್ಸವ ಸಂಪೂರ್ಣವಾಗಿ ಮುಗಿದಿರಲಿಲ್ಲ.ರಥವನ್ನು ಒಂದು ಘಟ್ಟದ ವರೆಗು ಎಳೆದು ನಂತರ ಮಂಗಳಾರತಿ ಮಾಡಿ ದ ಮೇಲೆಯೇ ರಥೋತ್ಸವ ಮುಗಿದಂತೆ.ರಥವನ್ನು ಕೇವಲ ನಾಲ್ಕು ಹೆಜ್ಜೆ ಎಳೆದಾಗಿತ್ತು ಎನ್ನಿವಷ್ಟರಲ್ಲೆ ಅಲ್ಲಿದ್ದ ಭಕ್ತ ವೃಂದದ ಕೆಲವರು - "ಮುಗಿತಲ್ಲಪ್ಪ ಹನುಮಪ್ಪನ ತೇರು...ಮತ್ತೆ ಮುಂದಿನ ವರ್ಷಕ್ಕೆ ರೆಡಿ ಯಾಗ್ಬೇಕು...?" ಅಂತ ಗೊಣಗುತ್ತ ನಡೆದರು.ಅಲ್ಲಿ ನೆರೆದಿದ್ದವರಲ್ಲಿ ಬಹುತೇಕರು ರಥಕ್ಕೆ ಎಸೆಯಲು ಇಟ್ಟುಕೊಂಡಿದ್ದ ಬಾಳಹಣ್ಣು ಮತ್ತು ಉತ್ತತ್ತಿಗಳನ್ನು ತಮ್ಮ ಹಾಳು ಹರಟೆಯಲ್ಲಿ ಎಸೆಯುವುದನ್ನೇ ಮರೆತು ಬಿಟ್ಟಿದ್ದರು.ಇನ್ನೇನು ರಥೋತ್ಸವ ನಡೆಯುವ ಸ್ಥಳ ಬಿಟ್ಟು ಹೊರಡ ಬೇಕು ಎನ್ನುವ ಹಂತದಲ್ಲಿ ಕೈ ಯಲ್ಲಿ ಹಾಗೆ ಇದ್ದ ಬಾಳೆ ಹಣ್ಣು ಮತ್ತು ಉತ್ತತ್ತಿ ನೆನೆಪಾಗಿತ್ತು.ಅಷ್ಟರಲ್ಲಿ ಮಂಗಳಾರತಿ ಮುಗಿಸಿ ಹನುಮಪ್ಪ ನ ಉತ್ಸವ ಮೂರ್ತಿಯನ್ನು ರಥ ದಿಂದ ಕೆಳಗೆ ಇಳಿಸಿಯೂ ಆಗಿತ್ತು.ಇಷ್ಟೆಲ್ಲಾ ಆದ ಮೇಲೆಯೂ ರಥಕ್ಕೆ ಬಾಳೆ ಹಣ್ಣು ಮತ್ತು ಉತ್ತತ್ತಿ ಎಸೆದು ಕೈ ಮುಗಿದು,ಗಲ್ಲ ಗಲ್ಲ ಬಡಿದು ಕೊಂಡರು.ರಥ ಕ್ಕೆ ಶಿರ ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂತ ಬಗ್ಗಿದಾಗಲೆಲ್ಲೆ ಕೇವಲ ರಥೋತ್ಸವಕ್ಕೆ ಬಂದ ಜನರ ಕಾಲಿಗೆ ನಮಸ್ಕರಿಸಲಾಗುತಿತ್ತು.

ಅಯಿತು ಮುಗಿಯಿತು ಆಂಜೆನೇಯ ಸ್ವಾಮಿಯ ರಥೋತ್ಸವ.ದೇವಸ್ಥಾನಕ್ಕೆ ಮತ್ತೊಮ್ಮೆ ಕೈ ಮುಗಿದು ಒಳಗೆ ಹೋಗಿ ಆಂಜನೇಯ ಸ್ವಾಮಿಯನ್ನು ಕಣ್ತುಂಬಿ ಕೊಂಡು ರಥೋತ್ಸವ ದ ನೆನೆಪ ಅಲ್ಲಿಯ ಸಾಂಸ್ಕೃತಿಕ ವೈಭವನ್ನು ಮನದಲ್ಲಿ ತುಂಬಿಕೊಂಡು ಎಲ್ಲರೂ ಮನೆಯ ದಾರಿ ಹಿಡಿದರು.ಹಿಂತಿರುಗುವಾಗ ಪ್ರತಿಯೊಬ್ಬರ ಮನದಲ್ಲೂ ಮತ್ತದೆ ಯಾಂತ್ರಿಕ ಜಗತ್ತಿನ ಗೋಜು , ಗದ್ದಲ ,ಗೊಂದಲ ಕಾಡ ಹತ್ತಿತ್ತು.ಒಬ್ಬರಿಗೆ ಒಂದೊಂದು ತರಹ.ಯಾರಿಗೊ ಕಛೇರಿ ಯಲ್ಲಿ ಹಿರಿಯ ಅಧಿಕಾರಿಗೆ ಹೇಳದೆ ರಜ ಹಾಕದೆ ಜಾತ್ರೆಗೆ ಬಂದಿದ್ದ ಸಂದರ್ಬ ಹೇಗೆ ಎದುರಿಸಬೇಕು ಅಂತ ಕಾಡುತಿದ್ದರೆ.ಇನ್ನು ಕೆಲವರಿಗೆ ಮಕ್ಕಳ ಶಾಲೆಯನ್ನು ಬಿಡಿಸಿಕೊಂಡು ಬಂದಿರುವುದರಿಂದ ಅವರ ಮನೆಗೆಲಸ ವನ್ನೆಲ್ಲ ತಾವು ಮಾಡಬೇಕಾಗುವುದಲ್ಲ ಅಂತ ಅಲ್ಲದೆ ಶಾಲಾ ಶಿಕ್ಷಕಿಯರ ಬಳಿ ಮಂಗಳಾರತಿ ಬೇರೆ ಮಾಡಿಸಿಕೊಳ್ಳಬೇಕಲ್ಲ ಅಂತ ಕಾಡುತಿತ್ತು. ಜಾತ್ರೆಯಲ್ಲಿ ಮಗನಿಗೆ ಒಂದಾದರೂ ಕನ್ಯ ಸಿಗಬಹುದು ಅಂತ ಬಂದಿದ್ದವರಿಗೆ ವಿಪರೀತ ನಿರಾಸೆ ಯಾಗಿತ್ತು.ಕನ್ಯೆಗಳೇನೋ ಸಿಕ್ಕಿದ್ದವು ಆದರೆ ಒಂದೊಂದು ಕನ್ಯೆಯದು ಒಂದೊಂದು ಬೇಡಿಕೆ.ಒಬ್ಬಳದು ಆಮೇರಿಕಾದಲ್ಲೇ ಕೆಲಸ ಮಾಡುವ ಹುಡುಗ ಬೇಕು ಇನ್ನೊಬ್ಬಳಿಗೆ ತಿಂಗಳಿಗೆ ಕನಿಷ್ಟವೆಂದರೂ ಒಂದು ಲಕ್ಷವರಮಾನವಿರುವ ಹುಡುಗ ಬೇಕಾಗಿತ್ತು.ಇನ್ನೊಂದಿಬ್ಬರಿಗಂತೂ ಮದುವೆ ಆದ ಮೇಲೆ ಗಂಡಿನ ಕಡೆಯವರೂ ಒಬ್ಬರೂ ಮನೆಗೆ ಬರಬಾರದು ಅಂತ ತಾಕೀತು ಮಾಡಿ ಹೇಳಿಬಿಟ್ಟಿದ್ದರು.ಈಗಿನ ಹುಡಿಗೀಯರ ಬೇಡಿಕೆ ಕೇಳಿ ಮಗನ ತಾಯಿ - "ಏನಪ್ಪ ,ಹನುಮಪ್ಪ ಮಗನ್ನ ಹೆತ್ತೆ, ಆದರೆ ಮನೆಗೆ ಸೊಸೆ ಬರೋ ಕಾಲ ಮುಗಿತು ಅನ್ಸತಾದ.ಮಗ ಮನೆ ಬಿಟ್ಟು ಹೋಗ ಕಾಲ ಬಂದಾದ ಅಂತ ಅನ್ಸತಾದ" ಅಂದುಕೊಂಡು ನಿಟ್ಟಿಸಿರಿಟ್ಟಳು.ಕೆಲವು ದಂಪತಿಗಳು ಸಂತಾನ ಬೇಡಿಕೆ ಹೊತ್ತು ಬಂದಿದ್ದರು.ಕೆಲವು ಪಡ್ಡೆ ಐಕಳು ಕೇವಲ ಹುಡಿಗೀಯರ ಚುಡಾಯಿಸುವುದಕ್ಕೆ ಜಾತ್ರೆ ಗೆ ಜಮಾಯಿಸಿದ್ದರು.ಹೀಗೆ ಜಾತ್ರಯಲ್ಲಿ ಜನವೂ ಜನ.

ಹೀಗೆ ಹಲವಾರು ಜನ ತರಾವರಿ ಕನಸು, ಬೇಡಿಕೆ, ಹರಕೆ ಹೊತ್ತು ಆಂಜನೇಯ ಸ್ವಾಮಿ ಹತ್ತಿರ ಬಂದಿದ್ದರು.ಕೆಲವರ ಹರಕೆ ಆಂಜನೇಯ ಸ್ವಾಮಿ ಇಡೇರಿಸಿದ್ದ,ಕೆಲವರ ಹರಕೆ ಬಾಕಿ ಇಟ್ಟಿದ್ದ. ಎಲ್ಲವನ್ನು ಅವರವರ ಒಳಿತು ಮತ್ತು ಕೆಡಕುಗಳ ಲೆಕ್ಕಚಾರದ ಮೇಲೆ ನಿರ್ಧಾರ ಮಾಡುತ್ತಿದ್ದ.ಆದರೆ ನಮ್ಮ ಆಂಜನೇಯ ಸ್ವಮಿ ಯಾರನ್ನು ಖಾಲಿ ಕೈಯಿಂದ ಕಳಿಸಿದ್ದಂತೂ ಇರಲಿಲ್ಲ.ಭಕ್ತಿಯಿಂದ ಕೈ ಮುಗಿದು ಬೇಡಿದವರಿಗೆ ಎಂದೂ ಮೋಸ ಮಾಡಿದ್ದಿಲ್ಲ ನಮ್ಮ ದೇವ್ರು.

ಎರೆಡು ದಿನಗಳಿಂದ ವಿಜೃಂಭಣೆಯಿಂದ ನೆರವೇರಿದ ಜಾತ್ರೆ ರಥೋತ್ಸವದೊಂದಿಗೆ ಕೊನೆಗೊಂಡಿತ್ತು.

"ಮುಗಿತಲ್ಲಪ್ಪ ಹನುಮಪ್ಪನ್ ತೇರು" -
"ಬಂತು ಬಂತು ಅನ್ನೊಷ್ಟರಲ್ಲಿ ಮುಗಿದ್ ಹೋಯ್ತು ...ನೋಡಪ್ಪ..
"-ನೋಡ್ರಿ ..ಸುಮ್ನೆ ಜಾತ್ರಿಗಂತ ಮಗಳನ್ನ ಕರ್ಕೊಂಡು ಬಂದ್ವಿ ...ಲಗ್ನ ಠರಾವ್ ಅಯ್ತು .ಎಲ್ಲಾ ಹನುಮಪ್ಪನ್ ದಯ ..."

ಲೋಕಾಭಿರಾಮವಾಗಿ ಮಾತಾಡುವಾಗ ಕೇಳು ಬಂದ ನಾಲ್ಕರು ಮಾತುಗಳಲ್ಲಿ ಹಲವಾರು ವಿಚಾರ ಗಳು ಸಾಮನ್ಯ ವಾಗಿರಿತಿದ್ದವು.ಮದುವೆ,ಮಕ್ಕಳು...ಮನೆ,ದುಡ್ಡು...ಇಂತಹದ್ದೆ ಹತ್ತಾರು ಮಾತುಗಳು.ಈ ಮಾತುಗಳಲ್ಲೆ ಮುಗಿದು ಹೋಗಿತ್ತು ಹನುಮಪ್ಪನ ತೇರು.



ಎಲ್ಲರೂ ಧನ್ಯತಾ ಭಾವದಿಂದ ಹನುಮಪ್ಪಗೆ ನಮಸ್ಕರಿಸಿ ನಾಳಿನ ದಿನಗಳ ಆತಂಕ,ಸವಾಲು,ಪ್ರೆಶ್ನೆ ...ಹೊತ್ತು ಮುಂದಿನ ವರ್ಷದ ಆಂಜನೇಯ ಸ್ವಾಮಿ ಯ ರಥೋತ್ಸವ ದ ಕನಸು ಕಾಣುತ್ತಲೇ ತಮ್ಮ ತಮ್ಮ ಊರುಗಳಿಗೆ ಮರಳಿದರು.


ಮತ್ತೆ ಎಲ್ಲಾ ಶುರು ವಾಯಿತು.ಬದುಕು,ಗೊಂದಲ,ಹಪಾ-ಹಪಿ,ಧಾವಂತ,ಓಟ,ದಿನ ನಿತ್ಯದ ಪ್ರಶ್ನೆ ಗಳು(?),ಧುತ್ತೆಂದು ನಿಲ್ಲುವ ಸವಾಲುಗಳು,ಮನೆಯ ರಗಳೆ,ಕಛೇರಿ ರಾಜಕೀಯ,ರಾಜ್ಯ ಮತ್ತು ರಷ್ಟ್ರ ರಾಜಕಾರಣ,ದಿನಿ ನಿತ್ಯದ ಕರ್ಚು,ಆದಾಯ, ಸಂಭ್ರಮದ ಸಮಾರಂಭಗಳು ,ಆಸ್ಪತ್ರೆ,ಅನಿರೀಕ್ಷಿತ ಖರ್ಚುಗಳು, - ಇವೆಲ್ಲಾ ಜಂಜಡಗಳಲ್ಲಿ ಅಕ್ಷರಸಹ ಹನುಮಪ್ಪನ ಎಲ್ಲರು ಮರೆತೆ ಬಿಟ್ಟಿದ್ದರು.

ದೂರ ದೂರ ದ ಊರುಗಳಲ್ಲಿ ಇದ್ದವರಿಗೆ ಹನುಮಪ್ಪ ನೆನಪಾದದ್ದು ಎಲ್ಲರ ಮನೆಬಾಗಿಲಿಗೆ ಅಂಚೆಯಣ್ಣ ಬಂದಾಗಲೇ! ಎಲ್ಲಿಂದೆಲ್ಲಿಯ ಸಂಬಂಧ ಅಂಚೆ ಯಣ್ಣನಿಗೂ ಹನುಮಪ್ಪನ ಜಾತ್ರೆಗೂ?ನಿಜ ಹನುಮಪ್ಪನ ಜಾತ್ರೆ ಗೂ ಅಂಚೆಯಣ್ಣನಿಗೂ ಸಂಬಂಧವೇ ಇಲ್ಲ.ಆದರೆ ಅಂಚೆಯಣ್ಣ ತನ್ನ ಕರ್ತವ್ಯ ಶ್ರಧೆಯಿಂದ ಮಾಡಿದಾಗಲೇ? ದೂರದ ಊರಿನ ಭಕ್ತರಿಗೆ ಹನುಮಪ್ಪನ ಜಾತ್ರೆ ದಿನಾಂಕ ತಿಳಿಯುತಿತ್ತು.ವಿಷಯ ಇಷ್ಟೆ.ಪ್ರತಿ ವರ್ಷದ ಜಾತ್ರೆ ತುಂಬಾ ಸಾಂಗೋಪಾಂಗವಾಗಿ ನಡೆಯಲೆಂದೆ ಹಿಂದಿನ ತಲೆಮಾರಿನ ಹಿರಿಯರು ಒಂದು ಸಮಿತಿ ರಚಿಸಿದ್ದರು.ಆ ಸಮಿತಿಗೆ "ಹನುಮಪ್ಪನ ಸೇವಾ ಸಮಿತಿ" ಅಂತ ಹೆಸರಿಟ್ಟು ಅದನ್ನು ನೊಂದಾಯಿಸಲಾಗಿತ್ತು.ಅಲ್ಲದೆ ಹನುಮಪ್ಪನ ದೇವಸ್ಥಾನ ವಿದ್ದದ್ದು ತುಂಗ-ಭದ್ರೆಯ ತಟದಲ್ಲಿ.ಆ ಮೂರ್ತಿ ಇದ್ದ ಸ್ಥಳಕ್ಕೆ ಇಂತಹದ್ದೆ ಊರು ಅಂತ ಹೆಸರು ಇರಲಿಲ್ಲ.ಆ ಮೂರ್ತಿ ಇದ್ದ ಸ್ಥಳದ ಸುತ್ತ ಮುತ್ತ ಕೇವಲ ನಾಲ್ಕಾರು ಕೀಲೊಮೀಟರ ನ ಸುತ್ತಳತೆಯಲ್ಲಿ ಸುಮಾರು ಎಂಟು ಗ್ರಾಮಗಳಿದ್ದವು.ಕೆಲವು ನದಿಯ ಆ ಕಡೆ ಇದ್ದರೆ ಇನ್ನು ಕೆಲವು ನದಿಯ ಈ ಕಡೆ.


ಒಂದೊಂದು ಗ್ರಾಮಕ್ಕೂ ಒಂದೊಂದು ಕೆಲಸ ವೆಂಬಂತೆ ಆ ಸಮಿತಿಯಲ್ಲಿ ನಿರ್ಧರಿಸಿಯೂ ಆಗಿತ್ತು.ಒಂದು ಗ್ರಾಮಕ್ಕೆ ಹೂವು,ಹಣ್ಣು,ಬಾಳೆ ಕಂಬ,ಮಾವಿನ ಸೊಪ್ಪು,ತರಕಾರಿ.ಇನ್ನೊಂದು ಗ್ರಾಮಕ್ಕೆ ಅಕ್ಕೆ,ಬೇಳೆ - ಹೀಗೆ ಬೆಲ್ಲ,ಎಣ್ಣೆ,ತುಪ್ಪ ಎಂಬಂತೆ ಒಂದೊಂದು ಗ್ರಾಮಕ್ಕೆ ಒಂದೊಂದು ಜವಬ್ದಾರಿಯನ್ನು ವಹಿಸಿ ಕೊಡಲಾಗಿತ್ತು.ಜಾತ್ರೆಯ ದಿನವನ್ನು ಆ ಹಿರಿಯ ತಲೆಗಳು ನಿರ್ಧರಿಸಿದ್ದವು.ಅದು ಜನೆವರಿ ತಿಂಗಳ ಮೊದಲ ಹುಣ್ಣಿಮೆ ಯಾಗಿತ್ತು.ಆ ದಿನ ಬರುವುದಕ್ಕೆ ಮೂರು ತಿಂಗಳಿಗೂ ಮೊದಲು ಹನುಮಪ್ಪ ನ ದೇವಸ್ಥಾನದಲ್ಲಿ "ಹನುಮಪ್ಪನ ಸೇವಾ ಸಮಿತಿ" ಸಭೆ ಸೇರುತಿತ್ತು.ಆ ವರುಷ ಸೇರ ಬಹುದಾದ ಜನ,ಹಿಂದಿನ ಜಾತ್ರೆಗಳಲ್ಲಿ ಉಳಿದಿರಬಹುದಾದ ಹಣ ಮತ್ತು ಜರುಗರಲಿರುವ ಜಾತ್ರೆಗೆ ಬೇಕಾಗಿರುವ ಹಣ ಎಲ್ಲವನ್ನು ಲೆಕ್ಕ ಹಾಕುತಿದ್ದರು.ಸಭೆ ಮುಗಿದಾದ ಮೇಲೆ ಆ ಗ್ರಾಮಸ್ಥರು ದೂರ ದೂರ ಇರುವ ತಮ್ಮ ಹತ್ತಿರದ ಸಂಬಂಧಿಕರಿಗೆ,ದೂರದ ಸಂಬಂಧಿಕರಿಗೆ,ಸ್ನೇಹಿತರಿಗೆ,ಪರಿಚಯಸ್ಥರಿಗೆ - ದೇಣಿಗೆ ಪುಸ್ತಕವನ್ನು ಕಳುಹಿಸಿ ಕೊಡುತ್ತಿದ್ದರು.ಆ ಪುಸ್ತಕಗಳನ್ನು ತೆರೆದ ಅಂಚೆಯಲ್ಲೆ ಕಳುಹಿಸುತ್ತಿದ್ದರಿಂದಲೇ- ಅಂಚೆಯಣ್ಣ ನಿರ್ದಿಷ್ಟ ವಿಳಾಸಗಳಿಗೆ ತಲುಪಿಸಿದಾಗಲೇ ಹನುಮಪ್ಪ ನ ತೇರು ಮತ್ತೊಮ್ಮೆ ಎಲ್ಲರಿಗೂ ನೆನಪಾಗುತಿತ್ತು.


ದೇಣಿಗೆ ಪುಸ್ತಕದ ಜೊತೆಗೆ ಜಾತ್ರೆಯ ವಿವರಗಳನ್ನೊಳಗೊಂಡ ಒಂದು ಚಿಕ್ಕ ಆಕಾರದ ಪುಟವನ್ನು ಕಳುಹಿಸಿಕೊಡಲಾಗುತಿತ್ತು.ಆ ಹಾಳೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ನಡೆಯುವ ದಿನಾಂಕವಾರು ಪೂಜೆ,ಆಚರಣೆ ಮತ್ತು ಶ್ರ್‍ಇ ಕ್ಷೇತ್ರದಲ್ಲಿ ಪಾಲಿಸಬೇಕಾಗಿರುವ ಕಟ್ಟಳೆಗಳನ್ನು ದಾಖಲಿಸಲಾಗಿರುತಿತ್ತು.ಪರ ಊರಿನ ಭಕ್ತಾದಿಗಳು ದೇಣಿಗೆ ಪುಸ್ತಕ ಬಂದಾದ ದಿನದಿಂದಲೇ ತಮ್ಮ ನೆಂಟರಿಷ್ಟರಲ್ಲಿ,ಸ್ನೇಹಿತರಲ್ಲಿ,ಸಹೋದ್ಯೋಗಿಗಳಲ್ಲಿ ದೇಣಿಗೆ ಬರೆಯಿಸುತಿದ್ದರು.ಪ್ರತಿಯೊಬ್ಬರು ತಮ್ಮ ಶಕ್ತಿ ಇದ್ದಷ್ಟು ದೇಣಿಗೆ ಬರೆದು ಕೈಮುಗಿದು ಧನ್ಯರಾಗುತಿದ್ದರು.ಇನ್ನು ಕೆಲವರು ದೇಣಿಗೆ ಪುಸ್ತಕದ ಪ್ರತಿ ಹಾಳೆ ತಿರುವಿ ತಮ್ಮ ಪರಿಚಯದವರು,ತಮ್ಮ ಸಂಬಂಧಿಕರು, ಮತ್ತು ತಮ್ಮನ್ನು ಪ್ರತಿಸ್ಪರ್ಧಿಗಳಂತೆ ಕಾಣುವವರ ದೇಣಿಗೆ ನೋಡಿ ತಮ್ಮ ದೇಣಿಗೆ ಅವರೆಲ್ಲರ ದೇಣಿಗೆ ಗಿಂತಲೂ ಹೆಚ್ಚು ಇರಬೇಕೆಂದೆ ದೇಣಿಗೆ ಪುಸ್ತಕದ ಹಾಳೆಗಳನ್ನು ನಾಲ್ಕೈದು ಬಾರಿ ತಿರುವಿಹಾಕಿ ನಂತರವಷ್ಟೆ ತಮ್ಮ ದೇಣಿಗೆಯನ್ನು ನಿರ್ಧರಿಸುತಿದ್ದರು.ಇವರಿಗೆ ತಮ್ಮ ಸ್ವಯಂ ಪ್ರತಿಷ್ಠೆ ತೋರಿಸಿಕೊಳ್ಳುವುದಷ್ಟೆ ಬೇಕಾಗಿರುತಿತ್ತು.ದೇಣಿಗೆ ಕೊಟ್ಟವರಲ್ಲಿ ಬಹುತೇಕರು ಜಾತ್ರೆಗೆ ಬರುಲು ಆಗುವುದಿಲ್ಲ ಪ್ರಸಾದ ವನ್ನು ಮರೆಯದೆ ತಂದು ಕೊಡಿ ಅಂತ ದಯನೀಯವಾಗಿ ಬೇಡುತ್ತಿದ್ದರು.ಆದರೆ ಇನ್ನು ಕೆಲವರು ದೇಣಿಗೆಯನ್ನು ಯಾರದೋ ಉಪಕಾರಕ್ಕೆ ಕೊಟ್ಟಂತೆ ಬರೆಯುತಿದ್ದರು.ಹನುಮಪ್ಪ ಅವರವರ ಯೂಗ್ಯತೆಗೆ ತಕ್ಕಂತೆಯೇ ಸರಿಯಾಗಿ ಪ್ರಸಾದವನ್ನು ಕೊಡುತಿದ್ದ.


ಇಷ್ಟೆಲ್ಲದರ ನಡುವೆ ಜಾತ್ರೆ ಸಮೀಪಿಸುತಿತ್ತು.ಬಹುತೇಕರು ಜಾತ್ರೆಗೋಸ್ಕರವೇ ತಮ್ಮ ವರುಷದ ರಜೆಗೆಳಲ್ಲಿ ರಜೆ ಎತ್ತಿಡುತಿದ್ದರು.ಆದರಲ್ಲೂ ಕೆಲವರಿಗೆ ರಜೆ ಇದ್ದರೂ ಹಾಕಲಾರದ ಪರಿಸ್ಥಿತಿ ಇರುತಿತ್ತು.ಇನ್ನು ಕೆಲವರು ಜಾತ್ರೆ ಕೆಲವೆ ದಿನ ಇದೆ ಎನ್ನುವಾಗ ಕಛೇರಿಗೆ ಹಾಕಬೇಕಾಗಿರುವ ರಜೆ ನೆನಪಾಗುತಿತ್ತು.ಆಗ ಏನೇನೊ ಮಾಡಿ ರಜೆ ತೆಗೆದು ಕೊಳ್ಳುವವರು ಕೆಲವರಾದರೆ ಇನ್ನು ಕೆಲವರು ಮೊದಲು ಜಾತ್ರೆ ಗೆ ಹೋಗಿ ಬರೋಣ ಬಂದಾದ ಮೇಲೆ ಯೋಚಿಸಿದಾರಾಯಿತು ಅಂತ ಹುಂಬ ವಿಚಾರದಿಂದ ಜಾತ್ರೆ ಗೆ ಹೋಗಲು ಸಿದ್ಧರಾಗುತಿದ್ದರು.ಈ ಎಲ್ಲಾ ಸರ್ಕಸ್ಸಿನಲ್ಲಿ ಹಣದ ತಾಪತ್ರಯ ಇಲ್ಲ ಎನ್ನುವಂತಿರಲಿಲ್ಲ.ಬಹುತೇಕರು ಬಂದ ಸಂಬಳದಲ್ಲಿ ಉಳಿತಾಯದಲ್ಲಿನ ಹಣವನ್ನು ಇದಕ್ಕೆ ಬಳಸುತಿದ್ದರು ಮತ್ತೆ ಕೆಲವರು ಸಾಲ ಮಾಡುತಿದ್ದರು.ಅಂತೂ ಇಂತೂ ಮತ್ತೊಂದು ಜಾತ್ರೆಗೆ ಸೇರಲು ಎಲ್ಲರೂ ಅಣಿಯಾಗಿದ್ದರು.
**********************************************
....Contd

No comments: