Wednesday, September 18, 2019

Published in 18th/09/2019 Mangala
*******************************************
                               ಭೂಗೋಳದ ಆ ತುದಿಯಿಂದ ಈ ತುದಿಯವರೆಗೆ....!

“Peace cannot be kept by force; it can only be achieved by understanding.”

― Albert Einstein
                                                            ಮಧ್ಯಂತರದ ನಂತರ....

ದಿನ ದಿನವೂ ಸರಳಾದೇವಿಯವರ ‘ಬಾವರಿ’ ಯ ಸ್ವಲ್ಪ ಸ್ವಲ್ಪವೆ ಕಡೆಮೆಯಾಗುತ್ತಾ ಬಂತು.ಮೊದ ಮೊದಲು
ಅವರ ಊಟ ಎಲ್ಲರಿಗೂ ಕ್ಲೀಷೆಯಂತೆ ಕಾಣುತ್ತಿದ್ದರೂ, ನಂತರದ ದಿನಗಳಲ್ಲಿ ರೂಢಿಯಾಗಿ ಹೋಯಿತು.ಹೀಗೆ
ದಿನಗಳು,ವಾರಗಳು ಕಳೆದವು.ಸರಳಾದೇವಿಯವರ ದೇಹವೇನೊ ಕೃಷವಾಗುತ್ತಾ ಹೋಯಿತು.ಆದರೆ ಯಾರೂ
ಬಯಸದೆ ಇದ್ದರೂ ಎಲ್ಲರ ಮನಸ್ಸಿನಲ್ಲಿದ್ದ,ಆದರೂ ಯಾರು ಬಾಯಿ ಬಿಟ್ಟು ಹೇಳದೆ ಇದ್ದ ಅವರ ಸಾವಿನ ಸೂಚನೆ
ಯಾರಿಗೂ ಕಾಣಿಸಲಿಲ್ಲ.ಮನೆಯವರಲ್ಲರಿಗೂ ಸರಳಾದೇವಿಯವರ ಈ ತರಹದ ದಿನಗಳನ್ನು ನೋಡಲು
ಕಷ್ಟವಾಗಿತ್ತು.’ಸಾವು’ ಬರಬೇಕು ಇಲ್ಲವೆ ‘ಸಂತರಾ’ ಬಿಟ್ಟುಬಿಡಬೇಕು.ಆದರೆ ದೀಕ್ಷೆ ಬಿಡುವ ಮಾತು ಹೇಳುವುದನ್ನು
ಯಾರಿಗೂ ಧೈರ್ಯವಿರಲಿಲ್ಲ.ಪಿಂಕಿಯೇನೊ ಅಜ್ಜಿಗೆ ಹೇಳಿದ್ದಳು,ಆದರೆ ಅಜ್ಜಿ ಕೇಳಬೇಕಲ್ಲಾ?ಸರಳಾದೇವಿಯವರ
‘ಸಲ್ಲೇಖನ’ ದ ದಿನಗಳು ಯಥಾಪ್ರಕಾರ ಸಾಗಿದ್ದವು.
‘ಸಲ್ಲೇಖನ’ದ ದಿನಗಳಲ್ಲಿಯೆ ಶ್ರವಣಬೆಳಗೊಳಕ್ಕೆ ಹೋಗಬೇಕು ಮತ್ತು ಗೊಮ್ಮಟನ ಕಾಲಿಗೆ ನಮಸ್ಕರಿಸಬೇಕು,
ಎನ್ನುವ ಆಸೆ ಸರಳಾದೇವಿಯವರ ಮನದಲ್ಲಿತ್ತು.ಅವರ ಆಸೆಯಂತೆ ಕುಟುಂಬದ ಸದಸ್ಯರೆಲ್ಲರೂ
ಸರಳಾದೇವಿಯರ ಜೊತೆಗೆ ಶ್ರವಣಬೆಳಗೊಳವನ್ನು ತಲುಪಿದರು.ಸರ್ವಸಂಗ ಪರಿತ್ಯಾಗಿಗಳು,ಹಾದಿ
ಬೀದಿಯುದ್ದಕ್ಕೂ,ಯಾವ ಮತ್ತು ಯಾರ ಪರಿವೆ ಇಲ್ಲದೆ ಬ್ರಹಾಂಡದ ಸೂಕ್ಷಾಣು ಸೂಕ್ಷ ಜೀವಿಗಳಿಗೂ ಕೂಡ
ಒಂದಿಷ್ಟೂ ಹಿಂಸೆಯಾಗಬರಾದು ಎನ್ನುವಂತೆ ಬದುಕಿರುವ ನೂರಾರು ಸನ್ಯಾಸಿಗಳನ್ನು ಕಂಡರು. ಆ ಮಂದಸ್ಮಿತ
ದೈವದ ಮುಂದೆ ಸರಳಾದೇವಿಯವರ ಪರಿವಾರದವರು ಕೈಮುಗಿದು ನಿಂತಿತು.ಎಂತಹ ಶಾಂತ
ಮುಖಭಾವ,ರಾಜನಾಗಿದ್ದರನಂತೆ ಅದೆಲ್ಲ ಏಕೆ? ಯುಧ್ಧಗಳನ್ನು ಕಂಡಿದ್ದರೇನೆಂತೆ ಹಿಂಸೆ ಎನ್ನವುದು ಬೇಡವೆ
ಬೇಡ, ಎಂದು ಸಾರುತ್ತಿರುವಂತೆ ಭಾಸವಾಯಿತು.ಪಿಂಕಿಯೂ ಸಹ ಗೊಮ್ಮಟನ ಮುಂದೆ ನಿಂತಳು ಪಿಂಕಿಗೆ ತಾನು
ಎಷ್ಟು ಚಿಕ್ಕವಳು ಅಂತ ಅನ್ನಿಸುವುದಕ್ಕೆ ಶುರುವಾಯಿತು.ಚಿಂತೆ ಇಲ್ಲದೆ ಧ್ಯಾನಿಸಿದಳು-.ಬಾಹುಬಲಿಯ ದೈತ್ಯ
ರೂಪ - ಹೃದಯ ವೈಶಾಲ್ಯತೆ,ಹಸನ್ಮುಖ - ಕಲ್ಮಶರಹಿತ. ಪಿಂಕಿ ಆ ಅಹಿಂಸಾವಾದಿಯನ್ನು ಉಂಗುಷ್ಠದಿಂದ
ನೆತ್ತಿಯ ವರೆಗೂ ನೋಡಿದಳು, ಮತ್ತೆ ಮತ್ತೆ ನೋಡಿದಳು.ಆ ಹಸನ್ಮುಖದಲ್ಲಿ ಎನೋ ಒಂದು ಸಂದೇಶ-ಶಾಂತಿ
ಬಯಸುತ್ತಿರುವಂತೆ ಮನಸ್ಸಿಗೆ ಮತ್ತು ಜಗತ್ತಿಗೆ!!
ಒಂದೇ ಒಂದು ಬಾಹುಬಲಿ ಮತ್ತು ಭರತರ ನಡುವಿನ ಯುಧ್ಧ ಬಾಹುಬಲಿಯನ್ನು ಜಿಗುಪ್ಸೆಯ ಮಡುವಿಗೆ
ನೂಕಿತ್ತು. ಭರತನ ನೆಲದಲ್ಲಿಯೆ ನಿಂತು ‘ಸರ್ವಜ್ಙ’ ಜ್ಞಾನಕ್ಕಾಗಿ ತಹತಹಿಸಿದ,ವರುಷಗಟ್ಟಲೆ ಕದಲದೆ ನಿಂತು
ತಪಸ್ಸು ಮಾಡಿ ಸರ್ವಜ್ಙ’ ಜ್ಞಾನ ಪಡೆದನು.ಇದು ಪಿಂಕಿ ತಾನು ಶಾಲೆಯಲ್ಲಿ ಓದಿದ್ದ ಇತಿಹಾಸ.ಈಗ ತನ್ನ
ಕಣ್ಮುಂದೆ ಚಿತ್ರಪಟವಾಗಿ ಸರಿಯುತ್ತಾ ಹೋಯಿತು.ಆ ಒಂದು ಯುಧ್ದ ಶಾಂತಿಗಾಗಿ ತಹತಹಿಸುವಂತೆ
ಮಾಡಿದರೆ,ಇಲ್ಲಿ ಪ್ರತಿದಿನವೂ ಯುಧ್ದ,ಮನಸ್ಸಿನಲ್ಲಿ ಅಷ್ಸೆ ಅಲ್ಲ ಭೂಗೋಳದ ಆ ತುದಿಯಿಂದ ಈ ತುದಿಯವರೆಗೆ
.ಆದರೆ ಯಾರೂ ಶಾಂತಿಯ ಪಡೆಯುವುದರ ಬಗ್ಗೆ ಯೋಚಿಸುತ್ತಿಲ್ಲ.ಆದರೆ ಎಲ್ಲರಿಗೂ ಬೇಕು ಶಾಂತಿ!!!

ದೂರದ್ಯಾವುದೊ ದೇಶದಲ್ಲಿ ಉಗ್ರರ ಅಟ್ಟಹಾಸ-ಹಸುಳೆ,ಹೆಂಗಸು ಎನ್ನುವ ಲೆಕ್ಕ ವಿಡದೆ ಸಿಕ್ಕ ಸಿಕ್ಕವರನ್ನು
ಸಿಗಿದು ಹಾಕಿದ್ದರು.ಮೋಬೈಲ್ ನಲ್ಲಿ ಓದಿದ ಸುದ್ದಿ ಭೀಕರವಾಗಿತ್ತು.ಸಾವಿರಾರು ಸಾವುಗಳು! ಪಿಂಕಿಗೆ ಯಾವುದು
ಅರ್ಥವಾಗಲಿಲ್ಲ.ಇಲ್ಲಿ ತನ್ನ ಅಜ್ಜಿ ಮತ್ತು ಸರ್ವ ಸಂಗ ಪರಿತ್ಯಾಗಿಗಳು ಸೂಕ್ಷಾಣು ಸೂಕ್ಷ ಜೀವಿಗಳಿಗೂ
ಹಿಂಸೆಯಾಗಬಾರದೆಂದು ಬದುಕುತ್ತಿದ್ದರೆ, ಬಿತ್ತರವಾದ ಸುದ್ದಿಯಲ್ಲಿ ಕೇವಲ ಸಾವನ್ನು ಮಾತ್ರ ಮನುಷ್ಯರು
ಬಯಸುತ್ತಿದ್ದರು.ಈ ವಿಷಯ ಅಜ್ಜಿಗೆ ಗೊತ್ತಾಗಿ ಹೋದರೆ ವ್ರತಕ್ಕೆ ಭಂಗ ಬರುತ್ತೆ ಯಾವ ಕ್ಷಣದಲ್ಲಿಯೂ
ಗೊತ್ತಾಗಬಾರದು,
’ಅಹಿಂಸಾ ಪರಮೋ ಧರ್ಮ’.!!!!
********************************************************************
. ಪಿಂಕಿಯ ಅಜ್ಜಿಯ ‘ಸಲ್ಲೇಖನ’ವೂ ಯಾವುದೆ ಅಡೆತಡೆ ಇಲ್ಲದೆ ಭರ್ಜರಿಯಾಗಿಯೆ ಸಾಗಿತ್ತು. ಹಾಗೆಯೆ
ತಿಂಗಳುಗಳು ಕಳೆದವು ಸರಳಾದೇವಿಯವರು ಈಗ ಘನ ಆಹಾರದಿಂದ ದ್ರವ ಆಹಾರಕ್ಕೆ
ಹೊರಳಿದ್ದಳು.ಸರಳಾದೇವಿಯವರ ಉದ್ದೇಶ ಕೇವಲ ‘ಕೈವಲ್ಯ ಜ್ಞಾನ’ ಸಾಧನೆ ಮಾತ್ರವಾಗಿತ್ತು.ಅಲ್ಲದೆ
ತೀರ್ಥಂಕರರು ಅನುಭವಿಸುವ -ಹುಟ್ಟು ಸಾವುಗಳಿಂದ ಮುಕ್ತಗೊಂಡ ಮೋಕ್ಷ ಸಾಧನೆಯಾಗಿತ್ತು. ’ಸಂತರಾ’ ದ
ಮೊದಲ ದಿನದಿಂದಲೆ ಮೋಕ್ಷಕ್ಕೆ ಹತ್ತಿರ ವಾದಂತೆ ಭಾಸವಾಗುತ್ತಿತ್ತು.ಆಹಾರದ ಪ್ರಮಾಣ ಕಡಿಮೆಯಾದಂತೆ
ಅಷ್ಟರ ಮಟ್ಟಿಗೆ ಮೋಕ್ಷ ಪ್ರಯಾಣದ ಹಾದಿಯು ಸವೆದಂತೆ ಅನ್ನಿಸುತಿತ್ತು. ಘನ ಆಹಾರದಿಂದ ದ್ರವ ಆಹಾರಕ್ಕೆ
ಪರಿವರ್ತನೆ ಯಾದಾಗಲಂತೂ ದೇಹ ನಿಜವಾದ ಅರ್ಥದಲ್ಲಿ ಹಗುರವಾಗಿತ್ತು.ಸರಳಾದೇವಿಯರಿಗೆ ಮೋಕ್ಷವಿನ್ನು
ದೂರವಿಲ್ಲ ಎನ್ನುವಂತೆ ಅನ್ನಿಸುತ್ತಿತ್ತು.ಹಿಂಸೆ ನೋಡಬಾರದು ಅದು ಸಲ್ಲದು. ಈ ವ್ರತದಲ್ಲಿ ಅದನ್ನೂ
ಕಟ್ಟುನಿಟ್ಟಿನಿಂದ ಸಾಧಿಸಬೇಕು.ಅಜ್ಜಿಯೂ ಅಷ್ಟೆ ‘ಅಹಿಂಸಾ’ ವ್ರತವನ್ನೂ ತುಂಬಾ ಸೂಕ್ಷ್ಮವಾಗಿ ಪಾಲಿಸುತಿದ್ದರು.ಆ
ಒಂದು ದಿನ ಆಕಸ್ಮಿಕವಾಗಿ ಟೆಲಿವಿಷನ್ ನಲ್ಲಿ ಉಗ್ರರ ಅಟ್ಟಹಾಸದ ಪ್ರಸಾರವನ್ನು ಆಕಸ್ಮಿಕವಾಗಿ
ಸರಳಾದೇವಿಯವರು ನೋಡಿಬಿಟ್ಟರು. ಮುಗಿಯಿತು ಇನ್ನು ತನ್ನ ಸಂತರಾಕ್ಕೆ ಅರ್ಥವಿಲ್ಲವೆಂದು ಧಡಬಡನೆ
ಬಸದಿಯ ತೀರ್ಥಂಕರರ ಬಳಿ ಓಡಿದರು.ಅದು ಉದ್ದೇಶಪೂರ್ವಕವಾಗಿ ನೋಡಿದ ಧೃಶ್ಯವಲ್ಲ ಆಕಸ್ಮಿಕವಾಗಿ
ಕಂಡಿದ್ದು ಪರವಾಗಿಲ್ಲ ವೆನ್ನುವ ಪರಿಹಾರ ದೊರೆಯಿತು.ಸರಳಾದೇವಿಯರಿಗೆ ಸಮಾಧಾನವಾಯಿತು.ಇದೆಲ್ಲಕ್ಕಿಂತ
ಹೆಚ್ಚಾಗಿ ಮನೆ ಮಂದಿಯೆಲ್ಲಾ ನಿಟ್ಟುಸಿರು ಬಿಟ್ಟರು.ಆಕಸ್ಮಿಕವಾಗಿ ಸಂಭವಿಸಿದ ಘಾತಕ್ಕೆ ತಮ್ಮ ತಾಯಿ,ಅತ್ತೆ,ಅಜ್ಜಿ
ಏನನ್ನು ಮಾಡಿಕೊಂಡುಬಿಡುತ್ತಾಳೆ ಎನ್ನುವ ಆತಂಕದಲ್ಲಿದ್ದರು ಮನೆಯವರೆಲ್ಲರೂ.ಮನೆಗೆ ವಾಪಸ್ಸಾದ ಅಜ್ಜಿ
ಯಥಾಪ್ರಕಾರ ತನ್ನ ಸಲ್ಲೇಖನದಲ್ಲಿ ಮುಳುಗಿಹೋದಳು.
*****************************************************
                                                              ಮಧ್ಯಂತರದ ಮೊದಲು...

ಸರಿ ಸುಮಾರು ಐದು ನಿಮಿಷಗಳ ಕಾಲ ಜಾಕಿಗೆ ಹಾಡನ್ನು ಶುರು ಮಾಡಲು ಬಿಡಲಿಲ್ಲ, ಆ ಪರಿಯ
ಸಂಭ್ರಮದಲ್ಲಿ ಮಿಂದೆದ್ದರು.ಕೆಲ ಹುಡುಗಿಯರು ಭಾವಾವೇಶಕ್ಕೆ ಒಳಗಾಗಿ ಅತ್ತು ಬಿಟ್ಟರು.ಜಾಕಿ ಹಾಡನ್ನು
ಶುರುಮಾಡಿದ ಆ ಕ್ಷಣ,ಒಂದು ನೀರವ ಮೌನ!!! ಬಾಯಿ ತೆರೆದು ಒಂದೇ ಅಳತೆಯಲ್ಲಿ ತನ್ಮಯನಾಗಿ ಮೈಕಲ್
ಜಾಕ್ಸನ್ ನ ಹಾಡೊಂದನ್ನು ಜಾಕಿ ಹೇಳಲು ಪ್ರಾರಂಭಿಸಿದಂತೆ ಒಬ್ಬೊಬ್ಬರು ತಮಗೆ ತೋಚಿದಂತೆ ಅದರಲ್ಲಿ

ಲೀನವಾಗಿ ಹೋದರು.ಕೆಲವರು ಸಣ್ಣಗೆ ತಮ್ಮೊಳಗೆ ತಾವು ಗುನುಗಿಕೊಂಡರು,ಕೆಲವರು ಚಿಟಿಕೆ ಹೊಡೆದು
ಆನಂದಿಸಿದರು,ಇನ್ನು ಕೆಲವರು ತಮ್ಮ ಕಾಲುಗಳನ್ನು ಹಾಡಿನ ರಿದಮ್ ಗೆ ತಕ್ಕಂತೆ ಆಡಿಸುತ್ತಾ
ಸಂಭ್ರಮಿಸಿದರು.ಪಿಂಕಿಯೂ ಹಾಗೆ ತನ್ನ ಕಾಲುಗಳನ್ನು ರಿದಮ್ ಗೆ ತಕ್ಕಂತೆ ಕುಣಿಸುತ್ತಾ ಸಂಭ್ರಮಿಸಿದಳು.ಹಾಡು
ಮುಗಿಯುತ್ತದಂತೆ ಪಿಂಕಿಯೂ ಸಹ ಜಾಕಿಯ ಜೊತೆ ಗೂಡಿ ಪಲ್ಲವಿಯನ್ನು ಹಾಡಹತ್ತಿದಳು. ಪಿಂಕಿ ಪಲ್ಲವಿಯನ್ನು
ಹಾಡುತ್ತ ತನ್ನ ಕಾಲುಗಳನ್ನು ಕುಣಿಸುತ್ತಾ ಮತ್ತೆ ಕೈಯನ್ನು ಬಡಿಯುತ್ತಾ ಸಂಭ್ರಮಿಸಿದಳು.ತಾನು ತನ್ನ ಗೆಳೆತಿಯರ
ಜೊತೆ ವರ್ಷದ ಕೊನೆಯಲ್ಲಿ ಕಂಪನಿಯಲ್ಲಿ ನಡೆಸುವ ‘ಸಂಭ್ರಮಾಚರಣೆ’ಯಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮ
ಮುಗಿಯುವ ಹಂತಕ್ಕೆ ಬಂದಿತ್ತು.ಜಾಕಿ ಇನ್ನು ಫಾಸ್ಟ್ ಬೀಟ್ ಎನ್ನುವಂತಹ ಹಾಡುಗಳನ್ನು ಹಾಕಿ ಮುಕ್ತ ‘ಡ್ಯಾನ್ಸ
ಫ್ಲೋರ್’ ಗೆ ಅನುವು ಮಾಡಿಕೊಟ್ಟ.ಅಲ್ಲಿ ಸೇರಿದ್ದ ಕಂಪನಿಯ ಜನರಲ್ಲೇನಕರು ‘ಮಧು ಲೋಕ’ ದ ಕಡೆ ಹೆಜ್ಜೆ
ಹಾಕಿದರು,ಇನ್ನು ಕೆಲವರು ಆ ಹೊತ್ತಿಗಾಗಲೇ ಓಲಾಡುತ್ತಾ ‘ಡ್ಯಾನ್ಸ ಪ್ಲೋರ್’’ ಕಡೆ ಅಡ್ಡಾ ದಿಡ್ಡಿ ಹೆಜ್ಜೆ ಹಾಕುತ್ತ
ಸಾಗಿದರು.ಪಿಂಕಿಯ ಗೆಳತಿಯರು ತೇಲಾಡಲು ಪಿಂಕಿಯನ್ನೂ ಎಳೆದು ಕೊಂಡು ಹೋದರು.ಅವರೆಲ್ಲಾ ಕೈಯಲ್ಲಿ
ಒಂದೊಂದು ಬೀಯರ್ ಬಾಟಲಿಗಳನ್ನು ಹಿಡಿದು ಅದರ ಒಗರು ರುಚಿಯನ್ನು ಆನಂದಿಸ ಹತ್ತಿದರು.ಪಿಂಕಿಗೂ
ಕುಡಿಯುವಂತೆ ಹೇಳಿದರು.ಆದರೆ ಪಿಂಕಿ ‘ನನಗೆ ಈಗ ಇದರ ಅಭ್ಯಾಸವಿಲ್ಲ,ಮುಂದೆ ತೀರಾ ಅನಿವಾರ್ಯ ವೆಂದರೆ
ನೋಡುವ” ಎಂದು ಹೇಳಿ ಜಾರಿಕೊಂಡಳು.ಉಳಿದವರೆಲ್ಲರು ಅಕ್ಷರಶಃ ಆಲ್ಕೋಹಾಲ್ ನಲ್ಲಿ
ಮಿಂದೆದ್ದರು.ಮಧ್ಯರಾತ್ರಿ ಸರಿಯಿತು ಇನ್ನೇನು ಎಲ್ಲಾ ಮುಗಿದಿತ್ತು ಎಲ್ಲರೂ ಮನೆ ಕಡೆ ಹಜ್ಜೆ ಹಾಕಿದರು. ಪಿಂಕಿಯ
ತಲೆಯಲ್ಲಿ ಕೇವಲ ಬೀಯರ್ ದೆ ಕೋಲಾಹಲ-ಬೀಯರ್ ಕುಡಿಯುವುದೊ, ಇಲ್ಲವೂ,ಕುಡಿದರೆ ಏನು ತಪ್ಪು?ಇಲ್ಲ
ಕುಡಿಯಬಾರದು! ಅದು ಹಿಂಸೆ,ನಾವು ‘ಅಹಿಂಸಾ ವಾದಿ’ಗಳು.ಬೀಯರ್ ನಲ್ಲಿ ನೊರೆಂಟು ಸೂಕ್ಷಾಣು
ಜೀವಿಗಳಿರುತ್ತವೆ, ಅವುಗಳ ಸಾವಿನಿಂದಲೆ ಆಲ್ಕೋಹಾಲ್ ಆಗಿ ಪರಿವರ್ತನೆ
ಆಗುವುದು,ಕುಡಿಯಬಾರದು.ಸರ್ವತಾಃ!!! ನೀರಿನಲ್ಲಿಯೂ ಸಹ ಅಷ್ಟೆ ತಾನೆ ಎಷ್ಟೊ ಸೂಕ್ಷ್ಮಾಣು
ಜೀವಿಗಳಿರತ್ತವೆ?ಆದರೆ ನೀರು ಅನಿವಾರ್ಯ,ನೀರಿಲ್ಲದೆ ಬದುಕಲಾಗದು.ಆದರೆ ಬೀಯರ್ ಎನೂ ಅನಿವಾರ್ಯವಲ್ಲ
ಅದಿಲ್ಲದೆ ಬದುಕಬಹುದು.
*********************************************************************
ಮನೆ ಮಂದಿಯೆಲ್ಲರೂ ಪಿಂಕಿಯ ನಾನಿ ಅಕ್ಕ ಪಕ್ಕ ಕುಳಿತು ಏನನ್ನೊ ಮನವರಿಕೆ ಮಾಡಲು
ಪ್ರಯತ್ನಿಸುತ್ತಿರುವುದನ್ನು ಪಿಂಕಿ ಗಮನಿಸದಳು.ನಂತರದಲ್ಲಿ ಪಿಂಕಿಗೆ ತಿಳಿದ ವಿಚಾರವೆನೆಂದರೆ ಪಿಂಕಿಯ ಅಜ್ಜಿ
ಅಂದರೆ ಪಿಂಕಿಯ ತಂದೆ ದಿನೇಶ್ ಲಾಲ್ ಚಂದ್ ರ ತಾಯಿ ಅರ್ಥಾತ್ ದಿವಂಗತ ಷಾ ಪೋಜಾಜಿವನೆ ಚಂದ್
ಜೈನ್ ರ ಹಂಡತಿ ಸರಳಾದೇವಿ ಮರುದಿನದಲ್ಲಿ ಸಲ್ಲೇಖನಕ್ಕೆ ಸಂಕಲ್ಪ ಮಾಡಿರುವುದು ಎನ್ನುವುದು .’ಸಂತರಾ’
ಅಥವಾ ‘ಸಲ್ಲೇಖನ’ ಎನ್ನುವ ದೀಕ್ಷೆ ಸಣ್ಣದಾಗಿರಲಿಲ್ಲ.ಅದು ಜೈನ್ ಸಂಪ್ರದಾಯದ ಶ್ರೇಷ್ಠ ದೀಕ್ಷೆಗಳಲ್ಲಿನ ಕೆಲವೆ
ಕಲವು ದೀಕ್ಷೆಗಳಲ್ಲಿ ಒಂದಾಗಿತ್ತು.ನಿಧಾನವಾಗಿ ಘನ ಆಹಾರ ಕಡಿಮೆ ಮಾಡುತ್ತ ನಂತರದ ದಿನಗಳಲ್ಲಿ ದ್ರವ
ಆಹಾರಕ್ಕೆ ಬಂದು ಕೇವಲ ದ್ರವ ಆಹಾರದಿಂದ ಜೀವ ಹಿಡಿದುಕೊಂಡು ಬದುಕಿರಬೇಕು.ಮುಂದಿನ ದಿನಗಳಲ್ಲಿ ದ್ರವ
ಆಹಾರವನ್ನು ತೊರೆದು ಬಿಡಬೇಕು.ಯಾವುದೆ ಅನ್ನ ನೀರು ಇಲ್ಲದೆ ಜೀವ ಹಾಗೆ ಹೊರಟು ಹೋಗಬೇಕು.ಇದು
ಜೈನ್ ಸಂಪ್ರದಾಯದ ಶ್ರೇಷ್ಠ ದೀಕ್ಷೆಗಳಲ್ಲಿ ಒಂದಾಗಿತ್ತು.ಎಲ್ಲರೂ ಅವರವರಿಗೆ ತೋಚಿದಂತೆ ಹೇಳುವಷ್ಟು
ಹೇಳಿಯಾಗಿತ್ತು.ಕೊನೆಗೆ ಬೇಸತ್ತು ಎದ್ದು ಹೋಗಿಬಿಟ್ಟರು.ಈಗ ಪಿಂಕಿಯ ಸರದಿಯಾಗಿತ್ತು.ನಾನಿಯ ಪಕ್ಕದಲ್ಲಿ
ಕುಳಿತು ನಿಮಗೆ ಸಲ್ಲೇಖನದ ಅವಶ್ಯಕತೆ ಇಲ್ಲ.ನೀವು ಇನ್ನು ಬಾಳುತ್ತೀರಿ, ನಿಮಗಿನ್ನು ಆಯುಷ್ಯವಿದೆ, ಅಲ್ಲದೆ

ಸಾವನ್ನು ನಾವು ನಾವೇ ಸ್ವಾಗತಿಸ ಬಾರದು ಸಾವು ತಾನಗೆ ತಾನು ಬರಬೇಕು. ಸರಳಾದೇವಿಯವರು
ಪಿಂಕಿಯನ್ನು ಕುರಿತು ನೀನಿನ್ನು ಚಿಕ್ಕವಳು ನಿನಗಿದು ಅರ್ಥ ಆಗುವುದಿಲ್ಲ ಎಂದು ಅವಳನ್ನು ಅವಳ ಮಾತನ್ನು
ಒಂದೇ ಏಟಿನಲ್ಲಿ ತಳ್ಳಿ ಹಾಕಿದ್ದರು.
ಮರುದಿನ ನಸುಕಿನಲ್ಲಿಯೆ ಎಲ್ಲರೂ ಎದ್ದು ಮತ್ತು ಎಲ್ಲ ರೀತಿಯಿಂದ ಸಿಧ್ದಳಾದ ಸರಳಾದೇವಿಯವರ ಜೊತೆ
ಮನೆಯ ಹತ್ತಿರದಲ್ಲೆ ಇದ್ದ ಬಸದಿಗೆ ಹೊರಟರು.ಪಿಂಕಿಯು ಅಜ್ಜಿಯ ಜೊತೆಯಲ್ಲಿಯೆ ಮನೆಯಿಂದ ನಿಧಾನವಾಗಿ
ನಡೆದು ಕೊಂಡು ಬಂದಳು.ನಾನಿಯ ಹೆಜ್ಜೆ ತುಂಬಾ ಸೋಕ್ಷ್ಮ ವಾಗಿದ್ದವು,ಕಾಲಡಿ ಸಿಕ್ಕು ಯಾವುದೆ ಜೀವಿಗಳು
ಸಾಯಬಾರದು, ಹಿಂಸೆ ಮಹಾಪರಾಧ.ಎಲ್ಲಾ ಜೀವಿಗಳಿಗೂ ಜೀವಿಸುವ ಹಕ್ಕಿದೆ ಎನ್ನುವುದಾಗಿತ್ತು.ಪಿಂಕಿಯು ತನ್ನ
ಅಜ್ಜಿ ಇಡುತ್ತಿದ್ದ ಆ ಸೂಕ್ಷ್ಮ ಹೆಜ್ಜೆಗಳನ್ನು ಗಮನಿಸಿದಳು.ಬೇರೆಯವರಿಗೆ ಹಿಂಸೆ ಬಯಸದ ಜೀವ ತನಗೆ ತಾನೆ
ಹಿಂಸಿಸುತ್ತಿದೆಯಲ್ಲಾ?ಇಲ್ಲ ದೇಹ ದಂಡನೆ ಸಾಧು ಅದು ಮೋಕ್ಷದ ಒಂದು ಸಾಧನೆ ಎನ್ನುವ ಹಿಂದೆಂದೊ ಅಜ್ಜಿ
ಹೇಳಿದ್ದ ಉತ್ತರ ನೆನಪಾಗಿತ್ತು. ಬಸದಿಯ ಒಳಗೆ ತೀರ್ಥಂಕರರ ಸನ್ನಿಧಾನದಲ್ಲಿ ಸಕಲ ಪದ್ಢತಿಗಳಂತೆ
ಸರಳಾದೇವಿಯವರಿಗೆ ಸಲ್ಲೇಖನದ ದೀಕ್ಷೆ ಬೋಧಿಸಲಾಯಿತು.ಪಿಂಕಿಯ ಅಜ್ಜಿ ನಿರುಮ್ಮಳಾಗಿ ದೀಕ್ಷೆ ಪಡೆದು
ನಮಸ್ಕರಿಸಿದಳು.ಪಿಂಕಿಯ ಅಜ್ಜಿ ಸರಳಾದೇವಿ ಸಲ್ಲೇಖನದ ದೀಕ್ಷೆ ಮನೆಯ ಇತರ ಇನ್ಯಾವುದೆ ಸದಸ್ಯರನ್ನು
ಪಿಂಕಿಯನ್ನು ಕಾಡಿದಷ್ಟು ಕಾಡಿರಲಿಲ್ಲ.ಪಿಂಕಿ ತಂದೆ ದಿನೇಶ್ ಆಯಿತು ಅವನ ಹೆಂಡತಿ ಟೀನಾ ಆಯಿತು,ಪಿಂಕಿಯ
ಸೋದರತ್ತೆ ಅನಿತಾಳಾಯಿತು ಮತ್ತೆ ಇನ್ನಿತರ ಬಂಧು ಮಿತ್ರರು ದೀಕ್ಷಾ ಸಮಾರಂಭಕ್ಕೆ ಬಂದಿದ್ದರು ಆದರೆ
ಅಷ್ಟಾಗಿ ವಿಚಲಿತಲಾಗದೆ ಇದ್ದರು.ಕಾರಣ ಅವರೆಲ್ಲರೂ ಸುಮಾರು ದಿನಗಳಿಂದ ಹೇಳುವಷ್ಟು
ಹೇಳಿಯಾಗಿತ್ತು.ಅಲ್ಲದೆ ಅವರವರ ಬೇರೆ ಬೇರೆ ಆದ್ಯತೆಗಳ ಮಧ್ಯದಲ್ಲಿ ನಿಧಾನವಾಗಿ ಮೈಮರೆತು ಈ ವಿಚಾರ
ಸೈಡ್ ವಿಂಗ್ ಗೆ ಸರಿಯುತ್ತಾ ಹೋಗಿತ್ತು.ಎಲ್ಲಾ ವಿಧಿ ವಿಧಾನಗಳು ಮುಗಿದು ಹೋದವು.ಅಲ್ಲಿ ಇನ್ನು
ತರ್ಕ,ವಿಚಾರ,ಸಂಭಾಣೆಗಳಿಗೆ ಅರ್ಥವಿರಲಿಲ್ಲ,ಆಗಿ ಹೋಗಿದ್ದನ್ನು ಒಪ್ಪಿಕೊಳ್ಳಬೇಕು.ಜೀವನದ ಎಷ್ಟೋ
ಪರಿಸ್ಥಿತಿಯಂತೆ!!!

                                                     ಇದು ಕೊನೆಯಂತೂ ಅಲ್ಲ...

ಆ ದಿನ ಪಿಂಕಿ ಕೆಲಸದ ವಿಪರೀತ ಒತ್ತಡದಲ್ಲಿ ಮುಳುಗಿ ಹೋಗಿದ್ದಳು.ಇನ್ನು ಆಗುವುದಿಲ್ಲ ಎನ್ನುವಂತೆ
ಪಿಂಕಿಯನ್ನು ಆ ದಿನದ ಒತ್ತಡ ಹಿಂಡಿ ಹಾಕಿದ್ದವು.ಬೇಡ ಬೇಡ ಅನ್ನುತ್ತಿದ್ದರು ಅವಳ ಮನಸ್ಸು ಆಫಿಸ್ ನ ಒತ್ತಡದ
ಕೆಲಸದ ಕಡೆ ಎಳೆದುಕೊಂಡು ಹೋಗುತ್ತಿತ್ತು.ಎಷ್ಟೆ ತಪ್ಪಿಸಿಕೊಂಡು ಹೊರಬಂದರು ಆಗುತ್ತಿರಲಿಲ್ಲ.ಕಾರಣ ಅದು
ಭಯಂಕರ ಒತ್ತಡದಿಂದ ಕೂಡಿದ ಕೆಲಸವಾಗಿತ್ತು.ಅವಳಿಗೆ ಆ ಒಂದು ಒತ್ತಡದಿಂದ ಆ ಕ್ಷಣಕ್ಕೆ ಮುಕ್ತಿ ದೊರೆಯ
ಬೇಕಾಗಿತ್ತು.ಅದು ವಾರಾಂತ್ಯ!!! ಈಗೀಗ ಪಿಂಕಿಯ ಸ್ನೇಹಿತರು ಅವಳನ್ನು ‘ಆಲ್ಕೊಹಾಲ್ ಮಜ್ಜನ’ ಕ್ಕೆ
ಪೀಡಿಸುವುದು ನಿಂತು ಹೋಗಿತ್ತು.ಆ ದಿನ ಎಲ್ಲರ ಜೊತೆ ತಾನಾಗಿಯೆ ಪಬ್ಬಿನ ದಾರಿ ತುಳಿದಳು. ಮನಸ್ಸಿನಲ್ಲಿ
ಅಳುಕು ತುಂಬಿತ್ತು.ಆದರೆ ಆ ಕ್ಷಣದ ಒತ್ತಡ ಮುಕ್ತಿಗಾಗಿ ಅದು ‘ಸಿಧ್ಧ ಔಷಧಿ’ ಎಂದು ಯಾರೊ ಹೇಳಿದ್ದರು.ಪಿಂಕಿಗೂ

ಸಹಾ ಆ ಒಂದು ಚಕ್ರತೀರ್ಥದಿಂದ ಹೊರಬರಬೇಕಾಗಿತ್ತು.ಉಳಿದವರನ್ನೆಲ್ಲಾ ಹಿಂಬಾಲಿಸಿ ಹೊರಟಳು.ಪಬ್ಬಿನ
ಮಬ್ಬು ಗತ್ತಲೆಯಲ್ಲಿ ಎಲ್ಲರ ಜೊತೆ ಹರಟುತ್ತಾ ಕುಳಿತಳು.ಸಣ್ಣಗೆ ಇದ್ದ ಅಳುಕು ದೈತ್ಯ ರೊಪ ಪಡೆದು ‘ಪಾಪ ಪ್ರಜ್ಞೆ’
ಯಂತೆ ಕಾಡ ತೊಡಗಿತು.ಒಂದರೆಕ್ಷಣ ಕಣ್ಮುಚ್ಚಿ ಕುಳಿತಳು.ಶ್ರವಣ ಬೆಳಗೊಳದ ಗೊಮ್ಮಟನ ವಿರಾಟ ರೂಪ
ಕಣ್ಮುಂದೆ ಬಂದು ನಿಂತಿತು.ಇನ್ನೇನು ಎಲ್ಲರ ಬೀಯರ್ ಗ್ಲಾಸ್ ಗಳು ಒಟ್ಟಾಗಿ ತಾಗಿಕೊಂಡು ‘ಚೀ..ಯ....ರ್ಸ’
ಎನ್ನಬೇಕು.ಆ ಹೊತ್ತಿನಲ್ಲಿ ಬೀಯರ್ ಬಾಟಲಿಯನ್ನು ಟೇಬಲ್ ನ ಮೇಲಿಟ್ಟು ಒಂದೇ ಓಟದಲ್ಲಿ ಮನೆಕಡೆ
ಓಡಿದಳು.ದಾರಿಯುದ್ದಕ್ಕೂ ಬೀಯರ್ ಹೀರಲು ಬಯಸಿದ್ದಕ್ಕಾಗಿ ವಿಪರೀತ ‘ಪಾಪ ಪ್ರಜ್ಞೆ’ ಕಾಡುತ್ತಿತ್ತು.ಎಂತಹ
ಘಾತವಾಗುತ್ತಿತ್ತು.ಏನಿದು ಹಿಂಸೆಯ ವಕಾಲತ್ತು ವಹಿಸುತ್ತಿದ್ದೇನೆ?’ ತನಗೆ ತಾನೇ ಕೇಳಿಕೊಂಡಳು.ಎಲ್ಲಾ
ಪರಿಸ್ಥಿತಿಯ ಕೈಗೊಂಬೆ ಎನ್ನುವ ವಿತಂಡವಾದವೂ ತೂರಿ ಬಂದದ್ದಾಯಿತು.ತಾನು ಜೈನಳೆನ್ನುವ ತರ್ಕದ ಮುಂದೆ
ಉಳಿದೆಲ್ಲವೂ ಗೌಣವಾಗಿ ಹೋದವು.ಮನೆಗೆ ಬಂದವಳೆ ತನ್ನ ನಾನಿಯ ಮುಂದೆ ಕುಳಿತು ಅತ್ತು ಬಿಟ್ಟಳು.ಅಜ್ಜಿ
ಪಿಂಕಿಯ ತಲೆ ಸವರಿ ಸಮಾಧಾನ ಮಾಡಿದರು.ಸರಳಾದೇವಿ ತಾನು ಹಿಡಿದಿರುವ ‘ಸಲ್ಲೇಖನ’ ವ್ರತ ’ದಿಂದ
ಬೇಸತ್ತು ಹೀಗೆ ಅಳುತ್ತಿರಬಹುದೆಂದು ಅಂದುಕೊಂಡಿದ್ದಳು.ಆದರೆ ಪಿಂಕಿಗೆ ವಿಪರೀವಾದ ‘ಪಾಪಪ್ರಜ್ಞೆ’ ಅಪರಾಧಿ
ಭಾವವನ್ನು ತರಿಸಿತ್ತು.ಪಿಂಕಿಗೆ ಆ ಮಟ್ಟದಲ್ಲಿ ಅಪರಾಧಿ ಭಾವ ಬರಲು ತಾನು ಕೇವಲ ಜೈನಳು ಅನ್ನುವ ಒಂದೆ
ಕಾರಣವಾಗಿರಲಿಲ್ಲ.ಪಿಂಕಿಯ ಅಜ್ಜಿ ಮನೆಯಲ್ಲಿ ‘ಸಂತರಾ’ ಪಡೆದು ಸಾವನ್ನು ಆಹ್ವಾನಿಸಿ ಮೋಕ್ಷಕ್ಕೆ
ಹಾತೊರುತ್ತಿದ್ದರೆ ತಾನು ಕೇವಲ ಸಣ್ಣದೊಂದು ಒತ್ತಡ ನಿಭಾಯಿಸಲಾಗದೆ ಹಿಂಸೆಯ ದಾರಿ ಹಿಡಿಯುತ್ತಿದ್ದದು
ಯಾವ ಧರ್ಮ? ತನ್ನನ್ನು ತಾನೆ ಪ್ರಶ್ನಿಸಿಕೊಂಡಳು.ಈ ಪ್ರಶ್ನೆ ಮತ್ತು ಇನ್ನೂ ಈ ತರಹದ ಹತ್ತಾರು ವ್ಯಂಗ್ಯಗಳು
ಪಿಂಕಿಯನ್ನು ತಿವಿಯುತ್ತದ್ದಲಿದ್ದವು.

ಇನ್ಯಾವುದೊ ಅರಿಯದ ರಾಷ್ಟ್ರದಲ್ಲಿ ಮತ್ತಮ್ಮೆ ಉಗ್ರರ ನರ್ತನ.ಯುಗಾದಿಗೆ ಮೊದಲು ಉದುರುವ
ಹಣ್ಣೆಲೆಗಳಂತೆ ಪಟಪಟನೆ ಜೀವಗಳು ಉದುರಿದ್ದವು.ಹಿರಿ ಜೀವ,ಹಸುಳೆ,ಅಸಾಹಕರು ಎನ್ನದಂತೆ ಸಿಕ್ಕ ಸಿಕ್ಕವರನ್ನು
ಸಿಗಿದು ಹಾಕಿದ್ದರು.ಆ ಸುದ್ದಿಯಿಂದ ತಪ್ಪಿಸಿಕೊಳ್ಳಲು ಪಿಂಕಿ ಚಾನಲ್ ನ್ನು ಬದಲಿಸಲು ಪ್ರಾರಂಭಿಸಿದಳು.ಎಲ್ಲಾ
ಚಾನಲ್ ನಲ್ಲೂ ಅದೇ ಸುದ್ದಿ.ಆ ‘ಹಿಂಸೆ’ಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು.ಮನಸ್ಸು ಮತ್ತದೆ ಸುದ್ದಿ ಕಡೆ
ಹೊರಳುತ್ತಿತ್ತು.ಮನದೊಳಗಿನ ಯುಧ್ದ ಮತ್ತೊಮ್ಮೆ ಜಾಗೃತ ಗೊಂಡಿತ್ತು.ವಿಷಯ ಸಣ್ದದಿರಬಹುದು ಆದರೆ
ಕುರುಕ್ಷೇತ್ರಕ್ಕೆ ಕಾರಣವಾಗಿತ್ತು.ಮತ್ತದೆ ಬೀಯರ್ ವಿಚಾರ!!!!.ಕುಡಿದರೆ ಏನು ತಪ್ಪು?ಸೂಕ್ಷ್ಮಾಣು ಜೀವಿಗಳು
ಸಾಯಲೇ ಬೇಕು,ಅದು ವಿಧಿ ನಿಯಮ.ಹುಟ್ಟುವ ಜೀವಿ ಸಾಯಲೆ ಬೇಕು ಅದರಂತೆ ಸಾಯುತ್ತವೆ.ಅದು ಒಂದು
ಪೇಯವಾಗಿ ಪರಿವರ್ತನೆಯಾಗುವುದು ಪ್ರಕೃತಿ .ಒಮ್ಮೆ ತರ್ಕ ಮತ್ತೊಮ್ಮೆ ವಿತಂಡ,ಮೊಗದೊಮ್ಮೆ ನೆಪ ಹೀಗೆ
ಅವಳ ಯುಧ್ಧ ಸಾಗಿತ್ತು.ಕುಡಿಯುವ ನಿರ್ಧಾರ ಮಡಿಯೇ ಬಿಟ್ಟಳು!!
ತಾನು ಕುಡಿಯಲೇಬೇಕು ಎನ್ನುವ ನಿರ್ಧಾರ ಮಾಡಿಯಾಗಿತ್ತು.ಸುಮ್ಮನೆ ಎನೋ ಒಂದು ನೆಪ ಮಾಡಿಕೊಂಡು
ಹೊರಟಳು,ತನ್ನ ಎಲ್ಲಾ ಬಾಲಂಗೋಚಿಯ ಸಂಗಡ,ಅವರೆಲ್ಲರಗೊ ಆಶ್ಚರ್ಯ!.ಪಿಂಕಿಯ ನಡಿಗೆಯಲ್ಲಿದ್ದ ವೇಗ ಪಬ್
ಹತ್ತಿರವಾದಂತೆ ನಿಧಾನವಾಗಿ ಕಡಿಮೆಯಾಗುತ್ತ ಹೋಯಿತು.ಸರಕ್ಕನೆ ಯುದ್ಧ ಭೂಮಿಯಾಗಿತ್ತು ಮನಸ್ಸು.ಅಕ್ಷರಶಃ
ತನ್ನೇಲ್ಲಾ ಯುಧ್ದಕ್ಕೆ ಒಂದು ಅಂಕ ಪರೆದೆ ಎಳೆದು ಬಿಟ್ಟಳು.ಅಳುಕಿನಲ್ಲಿಯೇ ಒಳ ನಡೆದಳು.ಯಾವುದೇ ಮತ್ತೊಂದು

ಯುಧ್ದಕ್ಕೆ ಆಸ್ಪದ ಕೊಡದೆ ಬೀಯರ್ ಹೀರಿ ಬಿಟ್ಟಿದ್ದಳು,ಪಿಂಕಿ,ಒಂದಾದ ಮೇಲೆ ಇನ್ನೊಂದು ಪೆಗ್.ಅದರ ಒಗರು
ರುಚಿಯನ್ನು ವಾಕರಿಸುತ್ತಲೆ ಅನುಭವಿಸುತದ್ದಳು.ಮೊದಲ ಅನುಭವ ಸ್ವಲ್ಪ ನಿರಾಳ ಭಾವ ತಂದಿತ್ತು,ಎಲ್ಲದರಿಂದ
ಮುಕ್ತಿ ಹೊಂದಿದ ಅನುಭವ ನೀಡಿತ್ತು.ಕುಡಿದ ಅಮಲಿನಲ್ಲೆ ಮನೆ ತಲುಪಿದಳು.ಪಿಂಕಿಗೆ ಬೇರೆ ಯಾರನ್ನು
ಎದುರಿಸುವುದು ಅಷ್ಟು ಕಷ್ಟವಾಗಲಿಲ್ಲ.ಆದರೆ ತನ್ನ ಅಜ್ಜಿಯನ್ನು ಎದುರಿಸುವುದಕ್ಕೆ ಆಗಲಿಲ್ಲ.ಸಲ್ಲೇಖನವೆನ್ನುವ ಕಠಿಣ
ವ್ರತದಿಂದ ಮರಣಶಯ್ಯೆಯಲ್ಲಿರುವ ಅಜ್ಜಿಯನ್ನು ನೋಡಿದಳು,ತನ್ನ ಮೇಲೆಯೆ ತನಗೆ ಅಸಹ್ಯ ಬರುವಂತೆ
ಆಗಿತ್ತು.ಥಟನೆ ಮನೆಗೋಡಿ ಪಶ್ಚತ್ತಾಪದಿಂದ ಬೆಂದು ಹೋದಳು. ಈಗ ಅವಳಲ್ಲಿ ಯುಧ್ದ ಶುರವಾಗಲಿಲ್ಲ.ಏಕೆಂದರೆ
ಅಲ್ಲಿ ಯುಧ್ದಕ್ಕೆ ಅವಕಾಶವಿರಲಿಲ್ಲ ಕಾರಣ ಅಲ್ಲಿ ಯಾವ ವೈರಿಗಳು ಇರಲಿಲ್ಲ.ಆ ಕ್ಷಣದಲ್ಲಿ ಎಲ್ಲವೂ
ನಿಚ್ಚಳವಾಗಿತ್ತು,ತನ್ನಲ್ಲಿನ ಯುದ್ಧ ಯ್ಯಾರ್ಯಾರ ನಡುವೆ ಎನ್ನುವಂತೆ.ಅದರೇ ಕೇವಲ ಕೇಲವೆ ನಿಮಿಷಗಳ
ಮಾತು.ನಂತರದಲ್ಲಿ ಮತ್ತದೇ ‘ಪಾಪ ಪ್ರಜ್ಞೆ’ ರಾತ್ರಿ ಕಳೆದಳು.ನಿದ್ದೆ ಬರಲಿಲ್ಲ.ಯಾವುದೋ ಒಂದು ಹೊತ್ತಿನಲ್ಲಿ
ಮಂಪರಿಗೆ ಜಾರಿದ್ದಳು.ಕಣ್ಣು ಬಿಡುವಷ್ಟರಲಲ್ಲಿ ಆಗಲೇ ಸುಮಾರು ಬೆಳಕಾಗಿ ಸುಮಾರು ಹೊತ್ತಾಗಿತ್ತು.ತನ್ನ
ನಾನಿಯ ಬಳಿ ಹೋದಳು.ವಿಪರೀತವಾಗಿ ಕ್ಷೀಣವಾಗಿ ಹೋಗಿದ್ದರು ಇನ್ನೆಷ್ಟು ದಿನಗಳು? ಅನ್ನುವಂತಾಗಿತ್ತು.ಆ
ದಿನದಿಂದ ದ್ರವ ಆಹಾರವನ್ನೂ ವರ್ಜಿಸಲು ಅಜ್ಜಿ ನಿರ್ಧರಸಿದ್ದಳು.ಪಿಂಕಿಗೆ ಹಿಂದಿನ ದಿನದ ‘ಹ್ಯಾಂಗೋವರ್’ ಇನ್ನೂ
ಸಂಪೂರ್ಣವಾಗಿ ಇಳಿದಿರಲಿಲ್ಲ.ಕಣ್ಣುಗಳು ಉರಿಯುತ್ತಿದ್ದವು,ಕಾಲುಗಳಲ್ಲಿ ನಿಶಕ್ತಿ.ತನ್ನ ಅಜ್ಜಿ ಏನೋ ಒಂದು
ಪರಮಾರ್ಥ ಸಾಧನೆಗೆ ದಿನದಿಂದ ಆಹಾರ ಕಡಿಮೆ ಮಾಡುತ್ತ ಬರುತ್ತಿದ್ದರೆ ತಾನು ಯಾವುದೊ ಒಂದು
ಕಾರಣವಾಗಿರದ ಕಾರಣ ಎತ್ತಿಕೊಂಡು ಕುಡಿಯಬಾರದನ್ನು ಕುಡಿದು ಬಂದಿದ್ದಕ್ಕೆ ತನ್ನ ಮೇಲೆ ತನಗೆ ಅಸಹ್ಯ
ಬರುವಷ್ಟರ ಮಟ್ಟಿಗೆ ಬೇಸರ ಹುಟ್ಟಿತ್ತು.
*******************************************************************************
ಸರಳಾದೇವಿಯವರ ದೇಹವೂ ಹಿಂದೆಂದಿಗಿಂತಲೂ ಕೃಷವಾಗಿತ್ತು.ಈಗ ಯಾವೊಂದು ಆಹಾರದ
ಅಧಾರವಿಲ್ಲದೆ ಉಸಿರನ್ನು ಹಿಡಿದಿದ್ದರು.ಅದೊಂದು ಇಳಿಸಂಜೆ ಸೋನೆ ಮಳೆ ಜಡಿಯುತ್ತಾ ಇತ್ತು.ನಗರದ ಒಂದು
ಪ್ರತಿಷ್ಠಿತ ಹೊಟೆಲ್ ನ ಮೂಲೆಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದರು.ಅದರ ಪರಿಣಾಮದಿಂದ ಬಸ್ಸಿನಿಂದ ಇಳಿದು
ಮನೆಕಡೆ ಹೊರಡತ್ತಲಿದ್ದ ಅಮಾಯಕ ತಾಯಿ ಮತ್ತು ಆಕೆಯ ಎರೆಡು ವರ್ಷದ ಹೆಣ್ಣು ಕಂದಮ್ಮ ಸುಟ್ಟು
ಕರಕಲಾಗಿದ್ದರು.ಕೋಣೆಯ ಒಂದು ಬದಿಯಲ್ಲಿದ್ದ ಮಂಚದಲ್ಲಿ ಮಲಗಿದ್ದ ಸರಳಾದೇವಿ ಟೀವಿಯಲ್ಲಿ ಬರುತ್ತಲಿದ್ದ ಆ
ಸುದ್ದಿ ಕೇಳುತ್ತಲೆ ಸಣ್ಣಗೆ ಕದಲಿದಳು.ಕದಲಿದ್ದರ ಪರಿಣಾಮದಿಂದ ಮಂಚ ಮತ್ತು ಮಂಚದ ಸುತ್ತಲಿದ್ದ ಕೆಲವಾರು
ವಸ್ತುಗಳು ರಪ್ ರಪ್ ನೆ ಕೆಳಬಿದ್ದವು.ಆ ಹೊತ್ತಿಗೆ ಇನ್ನೂ ತಮ್ಮ ಅಂಗಡಿ ಕಾರು ಬಾರು ಮುಗಿಸಿಕೊಂಡು ಮನೆಯ
ಯಾವ ಗಂಡಸರು ಮನೆಗೆ ಮರಳಿರಲಿಲ್ಲ.ಮನೆಯಲ್ಲಿದ್ದವರು ಓಡೋಡಿ ಕೋಣೆಯ ಬಳಿ
ಬಂದರು.ಸರಳಾದೇವಿಯವರ ತೆರೆದ ಕಣ್ಣುಗಳು ಹಾಗೆಯೇ ಇದ್ದವು.ಬಾಯಿ ಮತ್ತು ಮೂಗಿನಿಂದ ಏನೊ ಒಂದು
ತರಹದ ದ್ರವ ವಸರುತ್ತಿತ್ತು.ಹತ್ತಿರ ಹೋಗಿ ಖಾತ್ರಿ ಮಾಡಿಕೊಂಡರು.ಕ್ಷಣ ಮಾತ್ರದಲ್ಲಿ ಮನೆಯ ಮಕ್ಕಳು ಅಂಗಡಿಗೆ
ಬೀಗ ಜಡೆದು ಓಡೋಡಿ ಬಂದರು.ಎಲ್ಲರೂ ಶ್ವೇತವಸ್ತ್ರಧಾರಿಗಳಾಗಿ ಮುಂದಿನ ಕಾರ್ಯಕ್ರಮಕ್ಕೆ
ಅಣಿಯಾದರು.ಕೇವಲ ಕೇಲವೇ ಘಂಟೆಗಳಲ್ಲಿ ಸುದ್ದಿ ನಗರದ ತುಂಬೆಲ್ಲಾ ಹರಡಿತು.ಎಲ್ಲಾ ಬಂಧು ಮಿತ್ರರು ಮನೆ
ಮುಂದೆ ನೆರೆದರು.ಪಿಂಕಿಯೂ ಓಡೋಡಿ ಬಂದಳು.ಅಜ್ಜಿ ಹುಟ್ಟು ಮತ್ತು ಸಾವಿನ ಚಕ್ರದಿಂದ
ಮುಕ್ತಳಾಗಿದ್ದಾಳೆ.ನಮಗೆಂದು ಮುಕ್ತಿ ?ಮನಸ್ಸಿನಲ್ಲಿಯೇ ಅಂದುಕೊಂಡಳು.

ಶಾಸ್ತ್ರೋಕ್ತವಾಗಿ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಆದ ಮೇಲೆ,ಪಿಂಕಿ ಅಜ್ಜಿಗೆ ನಮಸ್ಕರಿಸಲು
ಮುಂದಾದಳು.ಪಿಂಕಿಗೆ ನಮಸ್ಕರಿಸಲು ಮನಸ್ಸು ಬರಲಿಲ್ಲ.ಹಿಂಸೆಯನ್ನೆ ಹಾಸಿ ಹೊದ್ದು ಮಲಗಿದ ನಮ್ಮಂತಹ ಜನಕ್ಕೆ
ಅಹಿಂಸೆಯನ್ನು ವರಿಸಿ ಅದರಂತೆ ಬದುಕಿ ಮೋಕ್ಷದ ಹಾದಿಯಲ್ಲಿರುವ ಅಜ್ಜಿಗೆ ನಮಸ್ಕರಿಸುವ ಯೋಗ್ಯತೆ ಇಲ್ಲವೆಂದು
ಕೊಂಡು ಮೇಲೆದ್ದಳು. ನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ನಂತರ ಮತ್ತೊಂದು ಘಟನೆ ನಡೆದಿತ್ತು.ಲೆಕ್ಕಕ್ಕೆ
ಸಿಗದಷ್ಟು ಸಾವು ಮತ್ತು ನೋವು ಸಂಭವಿಸಿದ್ದವು.ಅಜ್ಜಿಯ ಹೆಣವನ್ನು ಮೇಲೆ ಎತ್ತಲಾಯಿತು ಪಿಂಕಿಗೆ ದುಃಖ
ತಡೆಯಲಾಗಲಿಲ್ಲ.