Thursday, November 14, 2019

೨೦೧೯ ಕರ್ಮ ವೀರ  ಕನ್ನಡ  ರಾಜ್ಯೋತ್ಸವ  ಕವನ  ಸ್ಪರ್ಧೆ  ತೀರ್ಪುಗಾರ   ಮೆಚ್ಚುಗೆ   ಪಡೆದ  ಕವಿತೆ
****************************************************************************

ವೈತರೇಣೆಯ ನದಿ ಮತ್ತು ಕನಸುಗಳ ವಿಮೆ....!

ಮೆದುಳ ಸುರಳಿಯಲ್ಲಿ ಹೊಳೆದು
ನಿದಿರೆಯ ಮಬ್ಬಲ್ಲೆ ಘಟಿಸಿದಂತೆ ಬೆಳೆದು
ಸಾಕಾರವಾಗದೆಂದೆ ಅರೆಬರೆಯಾಗಿದ್ದೆ -
ಕೊನೆಗೊಳ್ಳುವುದಕ್ಕೆ ಗೊತ್ತು ಗುರಿಯಿಲ್ಲ! * (ಕನಸುಗಳು)

ಮಣಿಕರ್ಣಿಕಾ ಘಾಟಿನ ಹೊಗೆ ಘಾಟಲ್ಲೆ
ದೇಹ ಬಿಟ್ಟಾತ್ಮವು ಸುಪ್ತವಾಗಿ ಗುಪ್ತವಾಗಿ
ಗಮ್ಯದಡಿಗೆ ಚಲಿಸದೆ ನಿಲ್ಲುವುದೆ?
ವೈತರೇಣೆಯ ನದಿಯ ರಕ್ತ, ಕೀವು, ಎಲುಬು, ಮಾಂಸ, ಮಜ್ಜಲೆಗಳ
ಮಡುವಲಿ ಬೇಡವೆಂದರೂ ಕರ್ಮ ಮುಳುಗೇಳಿಸದೆ ಬಿಡುವುದೆ?. *(ಆತ್ಮ)

ಲಂಗು ಲಗಾಮು ಇಲ್ಲದೆ ಬೆಳೆದ ಕನಸು
ರಾಗ ದ್ವೇಷಗಳಲ್ಲೆ ಬೆರೆತು ದೂರ ದೂರ ಸಾಗಿ -
ಮನುಷತ್ವವೆ ಮರೆತು ಎಲ್ಲೆಲ್ಲಿಯೊ ಕಳೆದು ಹೋಗುವ
ಮಾಗದ ಬಾಗದ ಕನಸುಗಳಿಗೆ ಶುಲ್ಕವಿಲ್ಲ!!!

ಆತ್ಮವ ದೂರ ದೂರಕೆ ಎಳೆದು-
“ಮಾಡುದ್ದೋಣ್ಣೊ ಮಹಾ ರಾಯ” ಎಂದು
ಕೀವು, ರಕ್ತದ ಮಡುವಲಿ ಬಿದ್ದು-
ಕುದ್ದು ಹೋಗುತಿಹವು ಆತ್ಮಗಳು ಶಿಕ್ಷೆಯಲಿ ಬೆಂದು
ಆ ಲೋಕದಲಿ ಯಾವ ರೀಯಾಯಿತಿಯೂ ಇಲ್ಲ!!!!

ವೈತರೇಣೆಯ ನದಿಯ ಆ ದಾರಿಯಲಿ
ಏನೆ ಆದರೂ ವಿನಾಯಿತಿ ಕೇಳಿ
ಕನಸಿನರಮನೆಗೆ ಶುಲ್ಕ ಕಟ್ಟದೆ ಕನಸಲೇನೇನೊ ಕಟ್ಟಿ
ಅರ್ಥವಾದುದಕೆ ಅಪಾರ್ಥದಲೇನೋ ಭಾವಿಸಿ –
ಕಾಯಿಸಿ ಬೇಯಿಸಿ ಹುರಿಯುವ ಆ-

ಪಾಷದ ಭಾಷೆಗೆ ರಿಯಾಯಿತಿಯ ಮಾತಿಲ್ಲ
ಕೊನೆಗೆ ಕಾಣುವ ಕನಸುಗಳಿಗೆ ವಿಮೆಯೂ ಇಲ್ಲ!!!